ನವದಹೆಲಿ: ಆಮ್ ಆದ್ಮಿ ಪಕ್ಷ (AAP) ನಾಯಕಿ ಆತಿಶಿ ಅವರು ಸೆಪ್ಟೆಂಬರ್ 21 ರಂದು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅವರೊಂದಿಗೆ ಇತರ ಕೆಲವು ನಾಯಕರು ಸಹ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟು, ಎಎಪಿ ಹೊಸ ಸರ್ಕಾರ ರಚಿಸಲು ಯೋಜನೆ ಹಾಕಿಕೊಂಡಿದೆ. ಅರವಿಂದ್ ಕೇಜ್ರಿವಾಲ್ ಸಂಪುಟದ ಪ್ರಸ್ತುತ ಸಚಿವರನ್ನು ಉಳಿಸುವ ಸಾಧ್ಯತೆಯಿದ್ದರೂ, ಇಬ್ಬರು ಹೊಸ ಸದಸ್ಯರನ್ನು ಸೇರಿಸುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಗೋಪಾಲ್ ರೈ, ಕೈಲಾಶ್ ಗೆಹಲೋತ್, ಸೌರಭ್ ಭಾರದ್ವಾಜ್ ಮತ್ತು ಇಮ್ರಾನ್ ಹುಸೇನ್ ಅವರನ್ನು ಸಂಪುಟದಲ್ಲಿ ಉಳಿಸಿಕೊಂಡು, ವಿಶಾಲ್ ರವಿ ಮತ್ತು ಕುಲದೀಪ್ ಕುಮಾರ್ ಅವರನ್ನು ಸೇರಿಸಬಹುದು. ಈಗಾಗಲೇ ಹಲವು ಇಲಾಖೆಗಳನ್ನಾಳುತ್ತಿದ್ದ ಆತಿಶಿ ಮುಖ್ಯಮಂತ್ರಿಯಾಗುತ್ತಿರುವುದರಿಂದ, ಅವರಿಂದ ತೆರವಾದ ಇಲಾಖಾ ಹುದ್ದೆಗಳಿಗೆ ಹೊಸಬರನ್ನು ನೇಮಕ ಮಾಡಲಾಗುವುದು.
ಸೆ. 26 ಮತ್ತು 27 ರಂದು ನಡೆಯುವ ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಶ್ವಾಸ ಮತಯಾಚನೆ ಜರುಗಲಿದೆ.