ಜಾರ್ಖಂಡ, ರಾಂಚಿ: ಜಾರ್ಖಂಡ್ನ ಸೆರೈಕೆಲಾ-ಖಾರ್ಸಾ ವಾನ್ ಜಿಲ್ಲೆಯಲ್ಲಿ ಇಂದು ಮುಂಜಾನೆ (Train Accident) ಮುಂಬೈ–ಹೌರಾ ರೈಲಿನ 18 ಬೋಗಿಗಳು ಹಳಿತಪ್ಪಿ, ಇಬ್ಬರು ಮೃತಪಟ್ಟಿದ್ದಾರೆ ಮತ್ತು 20 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಅವಘಡ ಮುಂಜಾನೆ 3.45 ಗಂಟೆಗೆ, ಚಕ್ರಧರಪುರ ವಿಭಾಗದ ಜಮ್ಶೆಡ್ಪುರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಬರಬಂಬೂ ಬಳಿ ಸಂಭವಿಸಿದೆ.
ಇದನ್ನೂ ಓದಿ: ದೆಹಲಿ: ಐಎಎಸ್ ಕೋಚಿಂಗ್ ಸೆಂಟರ್ಗೆ ನೀರು ತುಂಬಿ ಮೂವರು ಅಭ್ಯರ್ಥಿಗಳ ಸಾವು
ಆಗ್ನೇಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಈ ವಿಷಯವನ್ನು ಸ್ಪಷ್ಟಪಡಿಸಿದರು, ಅಪಘಾತಕ್ಕೀಡಾದ ಕೋಚ್ಗಳನ್ನು ಗ್ಯಾಸ್ ಕಟ್ಟರ್ಗಳ ಸಹಾಯದಿಂದ ಕತ್ತರಿಸಿ, ಬೋಗಿಯ ಬಾತ್ರೂಮ್ನಿಂದ ದೇಹಗಳನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಸೆರೈಕೆಲಾ-ಖಾರ್ಸಾವಾನ್ ಉಪ ಅಭಿವೃದ್ಧಿ ಆಯುಕ್ತ ಪ್ರಭಾತ್ ಕುಮಾರ್ ಬಡಿಯಾರ್ ತಿಳಿಸಿದ್ದಾರೆ.
ರೈಲ್ವೆಯ ಹಿರಿಯ ಅಧಿಕಾರಿ ಓಂ ಪ್ರಕಾಶ್ ಚರಣ್ ಮಾಹಿತಿ ಪ್ರಕಾರ, ಘಟನಾ ಸ್ಥಳದಲ್ಲಿ ಗೂಡ್ಸ್ ರೈಲು ಕೂಡ ಹಳಿತಪ್ಪಿದೆ. ಆದರೆ, ಈ ಎರಡು ಅಪಘಾತಗಳು ಏಕಕಾಲದಲ್ಲಿ ಸಂಭವಿಸಿದವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಳಿತಪ್ಪಿದ 18 ಬೋಗಿಗಳಲ್ಲಿ 16 ಪ್ಯಾಸೆಂಜರ್ ಬೋಗಿಗಳಾಗಿದ್ದವು, ಎಂದು ಅಧಿಕಾರಿಗಳು ತಿಳಿಸಿದ್ದಾರೆ.